ಸ್ಪರ್ಶ್ ೧೯೮೦ರ ಒಂದು ಹಿಂದಿ ಚಲನಚಿತ್ರ. ಇದನ್ನು ಸಾಯಿ ಪರಾಂಜಪೆ ನಿರ್ದೇಶಿಸಿದ್ದಾರೆ. ಮುಖ್ಯಪಾತ್ರಗಳಲ್ಲಿ ನಸೀರುದ್ದೀನ್ ಷಾ ಮತ್ತು ಶಬಾನ ಆಜ್ಮಿ ನಟಿಸಿದ್ದಾರೆ. ಇವರು ಅನುಕ್ರಮವಾಗಿ ಅಂದರ ಒಂದು ಶಾಲೆಯಲ್ಲಿ ದೃಷ್ಟಿಹೀನ ಪ್ರಾಂಶುಪಾಲ ಮತ್ತು ಕಣ್ಣುಳ್ಳ ಶಿಕ್ಷಕಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲಿ ಅವರು ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಆದರೆ ಶೀಘ್ರವೇ ಅವರ ಸಂಕೀರ್ಣತೆಗಳು ತಗುಲಿಕೊಂಡು ಅವರು ಅವನ್ನು ದಾಟಿ ಪ್ರೀತಿಯ "ಸ್ಪರ್ಶ"ದೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಹೆಣಗಾಡುತ್ತಾರೆ. ಈ ಚಿತ್ರವು ಅದರ ಮುಖ್ಯನಟರ ಸೂಕ್ಷ್ಮ ನಟನೆಗಾಗಿ, ಜೊತೆಗೆ ದೃಷ್ಟಿಹೀನರೊಂದಿಗಿನ ಸಂಬಂಧಗಳ ಸಮಸ್ಯೆಯ ನಿರ್ವಹಣೆಗಾಗಿ ಅತ್ಯಂತ ಸ್ಮರಣೀಯವಾಗಿ ಉಳಿದಿದೆ. "ಅಂಧರ" ಮತ್ತು "ದೃಷ್ಟಿಯುಳ್ಳವರ" ಪ್ರಪಂಚಗಳ ನಡುವಿನ ಭಾವನಾತ್ಮಕ ಹಾಗೂ ಗ್ರಹಿಕೆಯ ಭೇದವನ್ನು ಬಹಿರಂಗಪಡಿಸುತ್ತದೆ. ಇದನ್ನು ಚಿತ್ರದಲ್ಲಿನ ಪಾತ್ರಗಳು ಪಡಿಮೂಡಿಸಿದ್ದಾರೆ. ಈ ಚಿತ್ರವು ಅತ್ಯುತ್ತಮ ಹಿಂದಿ ಚಲನಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು. ಆದರೆ, ಚಿತ್ರದ ಬಿಡುಗಡೆಯು ಹೆಚ್ಚುಕಡಿಮೆ ೪ ವರ್ಷಗಳು ವಿಳಂಬವಾಯಿತು. ಈ ಚಿತ್ರವು ನಾಸೀರುದ್ದೀನ್ ಶಾರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ, ಸಾಯಿ ಪರಾಂಜಪೆಯವರಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದಿತು. ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ಇದು ಅಗ್ರ ಎರಡು ಪ್ರಶಸ್ತಿಗಳನ್ನು ಗೆದ್ದಿತು: ಅತ್ಯುತ್ತಮ ಚಲನಚಿತ್ರ ಮತ್ತು ಸಾಯಿ ಪರಾಂಜಪೆಯವರಿಗೆ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ. ಇದಲ್ಲದೇ, ಶಬಾನಾ ಆಜ಼್ಮಿ ಅತ್ಯುತಮ್ಮ ನಟಿ ಪ್ರಶಸ್ತಿಗೆ ನಾಮನಿರ್ದೇಶಿತರಾದರು. ಅಂತಿಮವಾಗಿ ಅದನ್ನು ಅವರು ಭಾವನಾ ಚಿತ್ರಕ್ಕಾಗಿ ಗೆದ್ದರು. == ಸಾರಾಂಶ == ಚಿತ್ರವು ಅಂಧರ ಬಗ್ಗೆ ಆಗಿದೆ, ವಿಶೇಷವಾಗಿ ಅಂಧ ಮಕ್ಕಳ ಜೀವನಗಳು ಹಾಗೂ ಅನಿಸಿಕೆಗಳ ಬಗ್ಗೆ ಮತ್ತು ಅವರ ಶಾಲೆಯ ಪ್ರಾಂಶುಪಾಲನ ಬಗ್ಗೆ. ಸ್ಪರ್ಶ್ ಸ್ಪರ್ಶದ ಸಂವೇದನೆ ಮತ್ತು ಅನಿಸಿಕೆಯನ್ನು ಸೂಚಿಸುತ್ತದೆ. ಅಂಧರು ದೃಷ್ಟಿಯ ಅನುಪಸ್ಥಿತಿಯಲ್ಲಿ ಇದರ ಮೇಲೆ ಅವಲಂಬಿಸುತ್ತಾರೆ. ಕಥೆಯು ಸುಮಾರು ೨೦೦ ಅಂಧ ಮಕ್ಕಳಿಗೆ ಶಿಕ್ಷಣ ನೀಡುವ ಅಂಧರ ಶಾಲೆಯಾದ ನವ್‍ಜೀವನ್ ಅಂಧ್‍ವಿದ್ಯಾಲಯದ ಪ್ರಾಂಶುಪಾಲನಾಗಿ ಅನಿರುದ್ಧ್ ಪರ್ಮಾರ್‌ನೊಂದಿಗೆ (ನಾಸೀರುದ್ದೀನ್ ಶಾ) ತೆರೆದುಕೊಳ್ಳುತ್ತದೆ. ಅನಿರುದ್ಧ್ ಬಹುತೇಕ ಭಾಗ ಕತ್ತಲೆಯ ಮತ್ತು ಒಂಟಿ ಅಸ್ತಿತ್ವವನ್ನು ಹೊಂದಿರುತ್ತಾನೆ. ಒಂದು ದಿನ, ವೈದ್ಯನ ಬಳಿ ಹೋಗುವ ದಾರಿಯಲ್ಲಿ ಒಂದು ಸುಂದರವಾದ ಹಾಡನ್ನು ಕೇಳಿ ವೈದ್ಯನ ಬದಲಾಗಿ ಆ ಗಾಯಕಿಯ ಮನೆಯ ಬಾಗಿಲಿಗೆ ಸಮ್ಮೋಹನಗೊಂಡು ತಲುಪುತ್ತಾನೆ. ಆ ಧ್ವನಿಯು ಮದುವೆಯ ಮೂರು ವರ್ಷಗಳ ನಂತರ ವಿಧವೆಯಾದ ಒಬ್ಬ ಯುವತಿ ಕವಿತಾ ಪ್ರಸಾದ್‌ಳದ್ದಾಗಿರುತ್ತದೆ (ಶಬಾನಾ ಆಜ಼್ಮಿ). ಕವಿತಾ ಕೂಡ ಏಕಾಂತ ಅಸ್ತಿತ್ವವನ್ನು ಇಷ್ಟಪಡುತ್ತಿರುತ್ತಾಳೆ. ಅವಳ ಬಾಲ್ಯದ ಗೆಳತಿ ಮಂಜು (ಸುಧಾ ಚೋಪ್ರಾ) ಅವಳಿಗಿರುವ ಏಕೈಕ ಗೆಳತಿಯಾಗಿರುತ್ತಾಳೆ. ಮಂಜು ಒಂದು ಪಾರ್ಟಿಯನ್ನು ಏರ್ಪಡಿಸಿದಾಗ ಕವಿತಾ ಮತ್ತು ಅನಿರುದ್ಧ್ ಮತ್ತೆ ಭೇಟಿಯಾಗುತ್ತಾರೆ. ಅವನು ಅವಳನ್ನು ಅವಳ ಧ್ವನಿಯಿಂದ ಗುರುತಿಸುತ್ತಾನೆ. ಸಂಭಾಷಣೆಯ ವೇಳೆ, ಶಾಲೆಯು ಓದಲು, ಹಾಡಲು, ಕರಕೌಶಲಗಳನ್ನು ಕಲಿಸಲು ಮತ್ತು ಮಕ್ಕಳೊಂದಿಗೆ ಸಮಯ ಕಳೆಯಲು ಸ್ವಯಂಸೇವಕರನ್ನು ಹುಡುಕುತ್ತಿದೆ ಎಂದು ಅವನು ಹೇಳುತ್ತಾನೆ. ಕವಿತಾಗೆ ಮನಸ್ಸಿರುವುದಿಲ್ಲ, ಆದರೆ ಮಂಜು ಮತ್ತು ಅವಳ ಗಂಡ ಅದನ್ನು ಪರಿಗಣಿಸುವಂತೆ ಬಲವಾಗಿ ಒತ್ತಾಯಿಸುತ್ತಾರೆ. ಕವಿತಾ ಸ್ವಯಂಸೇವಕಿಯಾಗಲು ನಿರ್ಧರಿಸುತ್ತಾಳೆ. ಕವಿತಾ ಶಾಲೆಯಲ್ಲಿ ಹೆಚ್ಚು ಸಮಯ ಕಳೆದಂತೆ ಅನಿರುದ್ಧ್‌ನೊಂದಿಗೆ ಗೆಳೆತನ ಬೆಳೆಸಲು ಆರಂಭಿಸುತ್ತಾಳೆ. ಕಾಲ ಕಳೆದಂತೆ ಗೆಳೆತನ ಬಲವಾಗಿ ಬೆಳೆದು ಅವರ ಮದುವೆ ನಿಶ್ಚಯವಾಗುತ್ತದೆ. ಆದರೆ ಅವರ ವ್ಯಕ್ತಿತ್ವಗಳು ಮತ್ತು ಅನಿಸಿಕೆಗಳು ಭಿನ್ನವಾಗಿರುತ್ತವೆ. ಅನಿರುದ್ಧ್ ತೀಕ್ಷ್ಣ ಸ್ವಭಾವದವನಾಗಿರುತ್ತಾನೆ. ಅಂಧರಿಗೆ ಸಹಾಯಬೇಕು ಆದರೆ ಅನುಕಂಪ ಅಥವಾ ದಾನವಲ್ಲ ಎಂದು ಅವನು ದೃಢವಾಗಿ ನಂಬಿರುತ್ತಾನೆ. (ಒಮ್ಮೆ ಅವನ ಕಚೇರಿಯಲ್ಲಿ ಕವಿತಾ ಕಾಫಿ ವಿಷಯದಲ್ಲಿ ಅವನಿಗೆ ನೆರವಾಗಲು ಪ್ರಯತ್ನಿಸಿದಾಗ, ಅವನು ತನ್ನ ಅತಿಥಿಯು ತನ್ನ ಸತ್ಕಾರ ಸಂಬಂಧಿತ ಸ್ಪಷ್ಟ ತೊಂದರೆಯನ್ನು ಜಯಿಸಲು ನೆರವಾಗುವ ವಿಚಾರದಲ್ಲಿ ಕೋಪಗೊಳ್ಳುತ್ತಾನೆ.) ಇತ್ತೀಚೆಗೆ ಸಾವಿನಿಂದ ನೊಂದ ಕವಿತಾ ಶಾಲೆಯನ್ನು (ಮತ್ತು ಅನಿರುದ್ಧ್‌ನನ್ನು) ಒಂದು ಆದರ್ಶದ, ತ್ಯಾಗ ಸೇವೆಯ ಕಡೆಗಿನ ದಾರಿಯಾಗಿ ನೋಡುತ್ತಾಳೆ. ಅನಿರುದ್ಧ್‌ಗೆ ಇದರ ಬಗ್ಗೆ ಗೊತ್ತಾಗಿ ಕವಿತಾ ಸೇವೆಯ ಈ ರೂಪದ ಮೂಲಕ ಕೇವಲ ತನ್ನ ಜೀವನದಲ್ಲಿನ ಶೂನ್ಯವನ್ನು ತುಂಬಿಸಲು ಪ್ರಯತ್ನಿಸುತ್ತಿದ್ದಾಳೆ ಎಂದು ಭಾವಿಸುತ್ತಾನೆ. ಅವಳು ಮದುವೆ ಪ್ರಸ್ತಾಪವನ್ನು ಪ್ರೀತಿಯಿಂದಲ್ಲದೆ ತನ್ನ ಕತ್ತಲೆಯಾದ ಜೀವನದಿಂದ ಹೊರಬರುವ ದಾರಿಯ ಕಡೆಗಿನ ತ್ಯಾಗವಾಗಿ ಒಪ್ಪಿದಳು ಎಂದು ಅವನು ಭಾವಿಸುತ್ತಾನೆ. ಈ ಸಮಯದಲ್ಲಿ, ಅನಿರುದ್ಧ್‌ನ ಸಹ ಅಂಧ ಗೆಳೆಯ ದುಬೇ (ಓಂ ಪುರಿ) ಇತ್ತೀಚೆಗೆ ನಿಧನಳಾದ ತನ್ನ ಹೆಂಡತಿಯು ತಮ್ಮ ಮದುವೆಯಲ್ಲಿ ಸಂತೋಷವಾಗಿರಲಿಲ್ಲ ಎಂದು ಪ್ರಲಾಪಿಸುತ್ತಾನೆ. ಇದೆಲ್ಲದ್ದರಿಂದ ಅನಿರುದ್ಧ್ ಕ್ಷೋಬೆಗೊಂಡು, ಗೊಂದಲಗೊಂಡು ವ್ಯಾಕುಲಗೊಳ್ಳುತ್ತಾನೆ. ಅವನು ಮದುವೆ ನಿಶ್ಚಿತಾರ್ಥವನ್ನು ಮುರಿದುಕೊಳ್ಳುತ್ತಾನೆ (ಆದರೆ ಕವಿತಾಗೆ ಕಾರಣ ತಿಳಿಸುವುದಿಲ್ಲ). ಅವಳು ಅವನ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾಳೆ. ಈಗ ಶಾಲೆಯಿಂದ ಸಂಬಳ ಪಡೆಯುವ ಉದ್ಯೋಗಿಯಾದ ಕವಿತಾ ಮಕ್ಕಳಿಗೆ ನೆರವಾಗುವುದನ್ನು ಮುಂದುವರಿಸುತ್ತಾಳೆ. ತನ್ನ ಮತ್ತು ಅನಿರುದ್ಧ್ ನಡುವಿನ ಆರಂಭದ ನಿರುತ್ಸಾಹವು ಘರ್ಷಣೆಗೆ ದಾರಿಮಾಡಿಕೊಡುತ್ತದೆ. ಅಂತಿಮವಾಗಿ, ಶಾಲೆಯಲ್ಲಿನ ಕಾರ್ಯಕ್ರಮಗಳಾದಂತೆ ಅವರು ಹಿಂದೆ ಚರ್ಚಿಸಲು ಸಾಧ್ಯವಾಗದಂತಹ ಅನಿಸಿಕೆಗಳನ್ನು ಹೊರತರುತ್ತದೆ. ಪರಿಸ್ಥಿತಿಯು ಕೆಳಮಟ್ಟಕ್ಕೆ ಇಳಿದು ಒಬ್ಬರು ಶಾಲೆಯನ್ನು ಬಿಡಬೇಕಾಗಿ ಬರುತ್ತದೆ. ಅನಿರುದ್ಧ್ ಮತ್ತು ಕವಿತಾ ಒಬ್ಬರಿಗ್ಗೊಬ್ಬರಿಗೆ ತಮ್ಮ ಅನಿಸಿಕೆಗಳ ಆಳದಿಂದ ಸ್ಪರ್ಶಿತರಾಗಿ ಅಂತಿಮವಾಗಿ ಹೊರಬರುವ ದಾರಿಯನ್ನು ನೋಡುವುದರೊಂದಿಗೆ ಚಲನಚಿತ್ರವು ಕೊನೆಗೊಳ್ಳುತ್ತದೆ. == ಪಾತ್ರವರ್ಗ == ಶಬಾನಾ ಆಜ಼್ಮಿ – ಕವಿತಾ ನಾಸೀರುದ್ದೀನ್ ಶಾ – ಅನಿರುದ್ಧ್ ಪರ್ಮಾರ್ ಸುಧಾ ಚೋಪ್ರಾ – ಮಂಜು ಮೋಹನ್ ಗೋಖಲೆ – ಜಗದೀಶ್ ಪ್ರಾಣ್ ತಲ್ವಾರ್ ಅರುಣ್ ಜೋಗಳೇಕರ್ ಓಂ ಪುರಿ – ದುಬೇ == ತಯಾರಿಕೆ == ಚಿತ್ರೀಕರಣ ಚಿತ್ರದ ಬಹುತೇಕ ಭಾಗವನ್ನು ನವ ದೆಹಲಿಯ ಅಂಧರ ಪರಿಹಾರ ಸಂಘದಲ್ಲಿ ಚಿತ್ರೀಕರಿಸಲಾಯಿತು. ಅನಿರುದ್ಧ್‌ನ ಪಾತ್ರವನ್ನು ಅಂಧರ ಪರಿಹಾರ ಸಂಘದ ಪ್ರಾಂಶುಪಾಲರಾಗಿದ್ದ ಮಿ. ಮಿತ್ತಲ್‍ರ ಮೇಲೆ ರೂಪಿಸಲಾಗಿದೆ. == ಪ್ರಶಸ್ತಿಗಳು == ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 1980: ಅತ್ಯುತ್ತಮ ಹಿಂದಿ ಚಲನಚಿತ್ರದ ರಾಷ್ಟ್ರಪ್ರಶಸ್ತಿ 1980: ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ: ನಾಸೀರುದ್ದೀನ್ ಶಾ 1980: ಅತ್ಯುತ್ತಮ ಚಿತ್ರಕಥೆಗೆ ರಾಷ್ಟ್ರಪ್ರಶಸ್ತಿ: ಸಾಯಿ ಪರಾಂಜಪೆ ಫಿಲ್ಮ್‌ಫೇರ್ ಪ್ರಶಸ್ತಿಗಳು 1985: ಫಿಲ್ಮ್‌ಫೇರ್ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ: ಬಾಸು ಭಟ್ಟಾಚಾರ್ಯ 1985: ಫಿಲ್ಮ್‌ಫೇರ್ ಪ್ರಶಸ್ತಿ - ಅತ್ಯುತ್ತಮ ನಿರ್ದೇಶಕಿ: ಸಾಯಿ ಪರಾಂಜಪೆ 1985: ಫಿಲ್ಮ್‌ಫೇರ್ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ: ಸಾಯಿ ಪರಾಂಜಪೆ == ಸಂಗೀತ == ಸ್ಪರ್ಶ್‌ನ ಸಂಗೀತವನ್ನು ಹಿರಿಯ ಸಂಗೀತ ನಿರ್ದೇಶಕ ಕಾನು ರಾಯ್ ನೀಡಿದ್ದಾರೆ ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಇಂದು ಜೈನ್ ಬರೆದಿದ್ದಾರೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == @ ಐ ಎಮ್ ಡಿ ಬಿ